Thursday, September 25, 2008

ಡೌನ್ಸ್ ಕ್ಯಾಂಟೀನ್ ಎಂಬ ಮಾಸದ ನೆನಪು

ವೈವಿಧ್ಯಮಯತೆ ಎಂದರೆ ಇದು ನೋಡಿ ಲೋಕಲ್ ಬೀಡಿ ಸೇದುವವರೂ ಬರುತ್ತಾರೆ, ಹೈಫೈ ಸಿಗರೆಟ್ ಎಳೆಯುವವರೂ ಸಹ. ಇವರ ಧೂಮಲೀಲೆಯಿಂದ ಕೆಮ್ಮುತ್ತಾ ತಮ್ಮ ಅಸಮ್ಮತಿ ಸೂಚಿಸುವ ಮತ್ತೊಂದಷ್ಟು ಜನ. ಈ ನಡುವೆ ಗಿರಾಕಿ ಸೂಚಿಸಿದ ತಿಂಡಿ ತೀರ್ಥಗಳ ಪಟ್ಟಿಯನ್ನು ತನ್ನದೇ ಧಾಟಿಯಲ್ಲಿ ಅಡಿಗೆ ಭಟ್ಟನಿಗೆ ರವಾನಿಸುವ ಎಂಟು ವರ್ಷದ ಪುಟ್ಟ ಪೋರ. ದಿನವಿಡೀ ಪಾಠ ಹೇಳಿ(ಖಂಡಿತಾ ಇಲ್ಲ), ಅವರು ಹೇಳಿದ್ದನ್ನು ಗಮನವಿಟ್ಟು ಕೇಳಿ!(ನಂಬಲು ಸಾಧ್ಯವೇಯಿಲ್ಲ) ಒಂದಿಷ್ಟು ದಣಿವಾರಿಸಿಕೊಳ್ಳಲು ಆಗಮಿಸಿದ ಗುರು-ಶಿಷ್ಯ ವೃಂದ. ಅವರಿವರು ಬಿಸಾಕಿದ ಎಂಜಲನ್ನು ತಿನ್ನಲು ತದೇಕಚಿತ್ತದಿಂದ ನೋಡುತ್ತಿರುವ ಬಡಕಲು ಬೀದಿ ನಾಯಿ ಟೈಗರ್!

ಹೀಗೆ ಹಸಿದವರು, ಹೊಟ್ಟೆತುಂಬಿದವರು, ದೇಸಿವಾದಿಗಳು, ಹೈಫೈ ಪಡ್ಡೆಗಳು, ಬೀದಿನಾಯಿಗಳು, ಧಂ ಎಳೆಯುವವರು, ಧೂಮಲೀಲೆಗೆ ಗರಂ ಆಗುವವರು, ಚಿಲಿಪಿಲಿಗುಟ್ಟುವ ಹಕ್ಕಿಗಳಂತಹಾ ಎಲ್ಲಾ ಸಾಂದರ್ಬಿಕ ಹಾಗೂ ಅಸಂಗತ ಘಟನೆಗಳ ಅಪ್ಯಾಯಮಾನತೆಯ ಬುತ್ತಿಯನ್ನೇ ಕಟ್ಟಿಕೊಡುವ ಸ್ಥಳವೆಂದರೆ ಗಂಗೋತ್ರಿಯ ಡೌನ್ಸ್ ಕ್ಯಾಂಟೀನ್.

ಗಂಗೋತ್ರಿ ಮತ್ತು ಜೆಸಿಇ ನಡುವಿನ ಕಣಿವೆಯಂತಹಾ ಪ್ರದೇಶದಲ್ಲಿ ಹತ್ತಾರು ಟೇಬಲ್ ಖುರ್ಚಿಗಳ ಹಾಗೂ ನಾಲ್ಕೈದು ಮಳಿಗೆಗಳ ಈ ಸ್ಥಳ ಮಲೆನಾಡ ಪರಿಸರವನ್ನು ನೆನಪಿಸುತ್ತವೆ. ತಗ್ಗಿನ ಪ್ರದೇಶದಲ್ಲಿ ಕಟ್ಟಿರುವುದರಿಂದ ಈ ಕ್ಯಾಂಟೀನ್‌ಗೆ ಡೌನ್ಸ್ ಎಂದು ಹೆಸರು ಬಂತೇನೊ ಗೊತ್ತಿಲ್ಲ. ಈ ಡೌನ್ಸ್ ಕ್ಯಾಂಟೀನ್ ಕೇವಲ ವಿಶ್ವವಿದ್ಯಾನಿಲಯದ ಗುರು ಶಿಷ್ಯರು ಮಾತ್ರವಲ್ಲದೆ ದಿನನಿತ್ಯ ದಣಿವಾರಿಸಿಕೊಂಡು ಒಂದು ಕಪ್ ಚಹಾ ಕುಡಿದು ದೇಶಾವಾರಿ ಮಾತನಾಡಿ ಮನೆಕಡೆಗೆ ಹೆಜ್ಜೆಹಾಕುವ ವಾಯುವಿಹಾರ ಪ್ರಿಯ ಸಾರ್ವಜನಿಕರಿಗೂ ನೆಚ್ಚಿನ ತಾಣ.

ನೂರಾರು ಜನ ಬಂದು ಹೋಗುವ ಕ್ಯಾಂಟೀನಿನ ಸುತ್ತಲೂ ಗಗನವನ್ನು ಚುಂಬಿಸುವಂತೆ ಬೆಳೆದು ನಿಂತ ತೆಂಗಿನ ಮರಗಳು, ಆಗೊಮ್ಮೆ ಈಗೊಮ್ಮೆ ಕೂಗುವ ಹಕ್ಕಿಗಳು, ಜೆಸಿಇ ಲಲನೆಯರು, ದೊಡ್ಡ ದೊಡ್ಡ ಕಾರು ಬೈಕುಗಳು, ಅದರ ಬಾನಿಟ್ ಮೇಲೆ ಕೂತು ಗಹನ ಚರ್ಚೆಯಲ್ಲಿ ಮುಳುಗುವ ಪಡ್ಡೆಗಳು.... ಒಂದು ಅಬ್ಸ್‌ಟ್ರ್ಯಾಕ್ಟ್ ಕಲಾಕೃತಿಯಂತೆ ಕಂಡುಬರುತ್ತದೆ.

ಬರೆಯುತ್ತಾ ಹೋದರೆ ಡೌನ್ಸ್ ಕ್ಯಾಂಟೀನ್ ಬಗ್ಗೆ ಕಾಲಂಗಟ್ಟಲೆ ಬರೆಯಬಹುದು ಆದರೆ, ಅವುಗಳು ಕೇವ ಮಟೀರಿಯಲಿಸ್ಟಿಕ್ ಆಗಿ ಕಾಣುತ್ತವೆ. ಅದರರ್ಥ ಈಗ ಬರೆದಿರುವುದೆಲ್ಲಾ ರಿಯಲಿಸ್ಟಿಕ್ ಎಂದು ಹೇಳುತ್ತಿಲ್ಲ. ಕಾರಣ ಕ್ಷಣ ಕ್ಷಣಕ್ಕೂ ಬದಲಾಗುವ ರಂಗದ ಮೇಲಿನ ಪರಿಕರಗಳಂತೆ ಈ ಡೌನ್ಸ್ ಕೂಡ ಹೊಸ ಹೊಸ ಅನುಭವಗಳನ್ನು ಉಂಟುಮಾಡುತ್ತದೆ ಎಂಬುದು ಹಲವರ ಅಂಬೋಣ. ಹಾಗಾಗಿ ಈ ಬರಹಕ್ಕೆ ಫುಲ್ ಸ್ಟಾಪ್.

ಶಮಂತ್ ಪಾಟೀಲ್.ಜೆ.

ಡೆಸ್ಕ್ ಎಂಬ ಅಮರಕೋಶ

ಮೊನ್ನೆ ಮಹಾರಾಜ ಕಾಲೇಜಿಗೆ ಹೋಗಿದ್ದೆ. ಸುಮಾರು ಮೂರು ವರ್ಷಗಳು ನಾನು ಓದಿದ, ಹರಟೆ ಕೊಚ್ಚಿದ ಕಾಲೇಜದು. ಕಾರಿಡಾರ್‌ನಲ್ಲಿ ಮುನ್ನಡೆದಂತೆ ಖಾಲಿ ಇದ್ದ ಕ್ಲಾಸೊಂದು ಕಣ್ಣಿಗೆ ಬಿದ್ದು ಅಲ್ಲೇ ಹಿಂದಿನ ಬೆಂಚೊಂದರಲ್ಲಿ ಕುಳಿತೆ. ಆ ಬೆಂಚಿನ ಮೇಲೆ ಬರೆದಿದ್ದ ಲೆಕ್ಕವಿಲ್ಲದಷ್ಟು ಕೈಬರಹಗಳ ನಡುವೆ ನಾನು ಅಂದು ಬರೆದಿದ್ದ ನನ್ನದೇ ಹೆಸರನ್ನು ಹುಡುಕತೊಡಗಿದೆ. ಈ ಮಧ್ಯೆ ಒಂದು ವಿಷಯ ತುಂಬಾ ಕಾಡತೊಡಗಿತು. ಅದೇ ಬೆಂಚು-ಖುರ್ಚಿಗಳು. ನೂರಾರು ವರ್ಷಗಳಿಂದ ಆ ನಾಲ್ಕು ಗೋಡೆಗಳ ನಡುವಲ್ಲಿ ನಡೆಯುವ ಅಧ್ಯಯನ, ಪ್ರೀತಿ, ಪ್ರೇಮ, ಕೋಪ, ತಾಪ, ವಾಗ್ಯುದ್ಧಗಳನ್ನು ಕೇಳಿಕೊಳ್ಳುತ್ತಾ ನಿರ್ಭಾವುಕವಾಗಿ ನಿಂತಿರುವ ಅದೇ ಬೆಂಚು-ಖುರ್ಚಿಗಳು.

ತೇಗ, ಹಲಸು, ಹೊನ್ನೆ ಮರಗಳಿಂದ ಮಾಡಿದ ಆ ಪೀಠೋಪಕರಣಗಳ ದೃಢತೆಗಿಂತ ತುಂಬಾ ವಿಸ್ಮಯಕಾರಿಯಾಗಿ ಕಂಡದ್ದು, ಅವುಗಳ ಮೇಲೆ ಎಲ್ಲೆಂದರಲ್ಲಿ, ಕೊಂಚವೂ ಜಾಗವಿಲ್ಲದಂತೆ ರಚಿತವಾಗಿರುವ ಹಸ್ತಾಕ್ಷರಗಳು! ಅಲ್ಲಿ ಏನುಂಟು? ಏನಿಲ್ಲ? ಮಹಾನ್ ವ್ಯಕ್ತಿಗಳ ನುಡಿಗಳು, ವಿದ್ಯಾರ್ಥಿಗಳ ಹೆಸರುಗಳು, ಅವರ ಪ್ರೇಯಸಿಯರ ನಾಮಧೇಯಗಳು, ಹೃದಯಾಕಾರದ ಚಿತ್ರದೊಳಗೆ ಮಿನುಗುವ ಪ್ರೇಮಿಗಳು, ಮೇಷ್ಟರುಗಳಿಗಿಟ್ಟಿರುವ ಅಡ್ಡ ಹೆಸರುಗಳು, ಪರೀಕ್ಷೆ ಉತ್ತರಗಳು, ದೇವರ ಹೆಸರು, ಸಿನೆಮಾ ಹೀರೊ ಹೀರೋಯಿನ್‌ಗಳ ಬಿರುದು ಬಾವಲಿಗಳು.... ಅಂದು ನಾವು ಪಾಠ ಕೇಳಲು ಬೇಸರವಾದಾಗ ಬರೆದ ನಮ್ಮದೇ ಹೆಸರು, ಕಿಡಿಗೇಡಿತನದಿಂದ ಯಾವುದೋ ಹುಡುಗನ ಹೆಸರೂಂದಿಗೆ ಇನ್ನಾವುದೋ ಹುಡುಗಿಯ ಹೆಸರನ್ನು ಸೇರಿಸಿ ಬರೆದು, ಆತ-ಆಕೆ ಬಂದೊಡನೆ ಗೊಳ್ ಎಂದು ನಗುತ್ತಿದ್ದುದು ಇಂದು ಬಾಲಿಶವಿನಿಸಿದರೂ ಅಂದು ಮೋಜಾಗಿತ್ತು..... ಹೀಗೆ ಎಲ್ಲವೂ ‘ಲಿಖಿತ’ ರೂಪದಲ್ಲಿ ಅಂದಿನಿಂದ ಇಂದಿನವರೆಗೂ ಲಭ್ಯ.

ಒಂದೊಂದು ಬೆಂಚುಗಳಲ್ಲೂ ಮೂರು ಚಿಕ್ಕ ಚಿಕ್ಕ ಬಾವಿಗಳು. ಹಿಂದಿನ ಕಾಲದಲ್ಲಿ ಬರೆಯಲು ಮಸಿ ಬಳಸಲು ಅನುಕೂಲವಾಗುವಂತೆ ತೋಡಿದ್ದ ‘ಧರ್ಮಾರ್ಥ’ ಬಾವಿಗಳು. ಹಿಂದೆಲ್ಲಾ ಮಸಿಯಿಂದ ತುಂಬಿತುಳುಕುತ್ತಿದ್ದ ಅವು ಇಂದು ಬರಿದಾಗಿವೆ. ಕುತೂಹಲಕ್ಕೆಂದು ಬೆರಳು ಹಾಕಿತಿಕ್ಕಿದರೆ, ಈಗಲೂ ಮಸಿ ಮೆತ್ತಿಕೊಂಡ ಅನುಭವವಾಗುತ್ತದೆ. ಆ ಬಾವಿಗಳಲ್ಲಿ ನಾವು ಪೇಪರ್ ಉಂಡೆಗಳನ್ನು ಎಸೆದು ಒಳಗೆ ಬೀಳಿಸುವ ಆಟವಾಡಿದ್ದು, ಹೀಗೆ ಬೆಂಚುಗಳು ಆಟದ ‘ಮೈದಾನವಾಗಿ’, ಬರೆಯುವ ‘ಪೇಪರ್’ ಆಗಿ ಪರಿವರ್ತಿತವಾಗುತ್ತಿದ್ದುದು ನಮ್ಮ ಅತಿಯಾದ ಇಚ್ಛಾಶಕ್ತಿ೦ii ಮತ್ತು ಊಹಾಶಕ್ತಿಯ ಪ್ರತೀಕಗಳೇನೋ!

ಬೆಂಚುಗಳ ವಿಷಯವನ್ನು ಮೆಲುಕು ಹಾಕುತ್ತಿದ್ದಂತೆ ಅನೇಕ ಘಟನೆಗಳು ತಾಮುಂದು ತಾಮುಂದು ಎಂದು ನೆನಪಿಗೆ ಬರತೊಡಗಿತು. ಕೆಲವು ವರ್ಷಗಳ ಹಿಂದೆ, ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ತಾವು ಓದಿದ ಮಹಾರಾಜ ಕಾಲೇಜಿಗೆ ಭೇಟಿ ನೀಡಿದ್ದಾಗ, ತಾವು ವಿದ್ಯಾರ್ಥಿಯಾಗಿದ್ದಾಗ, ಬೆಂಚಿನ ಮೇಲೆ ಬರೆದ ‘ಆರ್.ಕೆ.ಎಲ್’ ಕೋಡ್‌ವರ್ಡಿಗೆ ಹುಡುಕಿದ್ದ ಘಟನೆ ಇಂದಿಗೂ ‘ಬೆಂಚು ಲೇಖಕ’ರಿಗೆ ಪ್ರೇರಕ ಶಕ್ತಿಯಾಗಿ ಕಾಣುತ್ತಿದೆ ಎಂಬುದು ಹಲವರ ಅಂಬೋಣ.

ಮಹಾರಾಜ ಕಾಲೇಜಿನ ಗೋಡೆ ಪತ್ರಿಕೆಯೊಂದರಲ್ಲಿ ‘ಝಲಕ್’ಎಂಬ ಹೆಸರಿನ ಕಾಲಂನಲ್ಲಿ ಹೀಗೆ ಬರೆದಿದ್ದರು, ಮೂರು ಮಾಟಗಾತಿಯರು ಒಂದೆಡೆ ಮಾತಿಗೆ ಕುಳಿತಾಗ, ಮೊದಲನೆ ಮಾಟಗಾತಿ ಇತರರನ್ನು ಕುರಿತು ‘ವಿಶ್ವದ ಅತ್ಯುತ್ತಮ ವಿಶ್ವಕೋಶ ಯಾವುದು? ಎಂದು ಸವಾಲು ಹಾಕುತ್ತಾಳೆ. ಅದಕ್ಕೆ ಉತ್ತರವೆಂಬಂತೆ, ಎರಡನೆ ಮಾಟಗಾತಿ ಬ್ರಿಟಾನಿಕಾ ವಿಶ್ವಕೋಶವೇ ಅತ್ಯುತ್ತಮ ಎಂದು ಹೇಳುತ್ತಾಳೆ. ತಾನೇನು ಕಮ್ಮಿ ಎಂದು ಮೂರನೇ ಮಾಟಗಾತಿ ಎನ್ಕಾರ್ಟಾ ಎಂದು ಉಸರುತ್ತಾಳೆ. ಎರಡೂ ಉತ್ತರಗಳಿಂದಲೂ ತೃಪ್ತಳಾಗದ ಮೊದಲನೇ ಮಾಟಗಾತಿ ಅಲ್ಲೇ ‘ಓದುತ್ತಾ’ ಕುಳಿತಿದ್ದ ಮಹಾರಾಜ ಕಾಲೇಜಿನ ವಿದ್ಯಾರ್ಥಿಯನ್ನು ಕರೆದು ಅದೇ ಪ್ರಶ್ನೆಯನ್ನು ಕೇಳುತ್ತಾಳೆ. ಕೊಂಚವೂ ಯೋಚಿಸದೆ ಆತ ‘ವಿಶ್ವದ ಅತ್ಯುತ್ತಮ ವಿಶ್ವಕೋಶ ಮಹಾರಾಜಾ ಕಾಲೇಜಿನ ಬೆಂಚುಗಳು’ ಎಂದು ಥಟ್ ಅಂತ ಹೇಳುತ್ತಾನೆ. ಉತ್ತರದಿಂದ ಸುಪ್ರಿಯಳಾದ ಮಾಟಗಾತಿ ಅವನಿಗೆ ತನ್ನ ಏಕಮಾತ್ರ ಪುತ್ರಿಯೊಂದಿಗೆ ಮಹಾರಾಜ ಕ್ಯಾಂಟೀನಿಗೆ ಡೇಟಿಂಗ್ ಕಳುಹಿಸುತ್ತಾಳೆ. ಅವಳೊಂದಿಗೆ ಹೋದ ಭೂಪ ಯಾರು? ಎಂಬ ಪ್ರಶ್ನೆಯೊಂದಿಗೆ ಆ ಬರಹ ಕೊನೆಗೊಳ್ಳುತ್ತದೆ.

ಯಾವ ಪುಣ್ಯಾತ್ಮನ ಕೈಯಲ್ಲಿ ಈ ಕಥೆ ಜನ್ಮ ತಾಳಿತೋ ಗೊತ್ತಿಲ್ಲ. ಆದರೆ ಆ ಬೆಂಚುಗಳ ಮೇಲೆ ಆತನಿಗೆ ಎಷ್ಟು ಅಕ್ಕರೆಯಿರಬಹುದು ನೋಡಿ! ವಾಸ್ತವವಾಗಿ ಅವನೊಬ್ಬನಿಗೇ ಅಲ್ಲ ಅಲ್ಲಿ ಕುಳಿತುಕೊಳ್ಳುವ ಹಲವರಿಗೆ ಆ ಬೆಂಚು-ಖುರ್ಚಿಗಳ ಮೇಲೆ ಇನ್ನಿಲ್ಲದ ಪ್ರೀತಿ. ಕೆಲವರೊಂತೂ ವರ್ಷವಿಡೀ ತಮ್ಮ ಖಾಯಂ ಜಾಗಕ್ಕಾಗಿ ತಿಕ್ಕಾಟ ನಡೆಸುತ್ತಲೇ ಇದ್ದರು. ಹಾಗಿತ್ತು ನಮ್ಮ ಸಂಬಂಧ.

ಆಗಾಗ ಹುಡುಗರು ತಮ್ಮ ಸಹಪಾಠಿ ಹುಡುಗಿಯರಿಗೆ, ‘ ನೋಡಮ್ಮ ಮುಂದೆ ನಿನ್ನ ಮಗುವಿಗೆ ಹೆಸರಿಡಲು ಕನ್ಫೂಸ್ ಆದರೆ, ಸೀದ ಇಲ್ಲಿಗೆ ಬಂದು, ಈ ಬೆಂಚುಗಳನ್ನು ನೋಡು, ವಿದಿನ್ ಹತ್ತು ಮಿನಿಟ್‌ನಲ್ಲಿ ಯಾವ ಹೆಸ್ರು ಇಡ್ಬೇಕು ಅಂತ ಡಿಸೈಡ್ ಆಗ್ಬಿಡತ್ತೆ, ಡೋಂಟ್ ವರಿ ಮಾಡ್ಕೊಬೇಡ...’ ಎಂದು ರೇಗಿಸುತ್ತಿದ್ದುದು ಸಾಮಾನ್ಯವಗಿರುತ್ತಿತ್ತು. ಈಗ ಹೇಗಿದೆಯೋ ಗೊತ್ತಿಲ್ಲ. ಕಾಲ ಬದಲಾದಂತೆ ಜೋಕುಗಳೂ, ರೇಗಿಸುವ ರೀತಿ ರಿವಾಜುಗಳೂ ಬದಲಾಗುತ್ತವೆ.

ಹೀಗೆ ಮೇಲಿಂದ ಮೇಲೆ ಹಲವು ನೆನಪುಗಳು ಮನಸ್ಸಿಗೆ ಬಂದು ಅಪ್ಪಳಿಸುತ್ತಿದ್ದಾಗ, ‘ಸಾರ್ ಕಸಾ ಹೊಡೀಬೇಕು ಸ್ವಲ್ಪ ಆಚೆಗೊಗಿ’ ಎಂಬ ಯಾರದೋ ಅಶರೀರವಾಣಿ ಕೇಳಿಬಂತು, ಮತ್ತೊಮ್ಮೆ ಬರುವೆನೆಂದು ಮನಸ್ಸಿನಲ್ಲೇ ಬೆಂಚಿಗೆ ವಿದಾಯ ಹೇಳಿ ಹೊರನಡೆದೆ.

ಶಮಂತ್ ಪಾಟೀಲ್.ಜೆ.

Friday, September 19, 2008

ಗಣಪ.... ಮತ್ತೆ ಬರುವೆಯಲ್ಲವೇ ಮುಂದಿನ ವರ್ಷ?

ಗಣಪ.... ಮತ್ತೆ ಬರುವೆಯಲ್ಲವೇ ಮುಂದಿನ ವರ್ಷ?


    ಅಡಿಗೆ ಮನೆಗೆ ನುಗ್ಗುವ ಮುನ್ನವೇ ನಮ್ಮ ಮೂಗಿನ ಹೊಳ್ಳೆಗಳನ್ನು ಆವರಿಸುವ ಕರಿದ ತಾಜಾ ಚಕ್ಕುಲಿಗಳ ಸುವಾಸನೆ, ಬಿಸಿ ಬಿಸಿಯಾಗಿ ಹಬೆ ಹೊರಸೂಸುವ ಕಡಬುಗಳ ಅಪ್ಯಾಯಮಾನ ಸ್ಪರ್ಶ, ತುಪ್ಪದಲ್ಲಿ ಅದ್ದಿದ ದೀಪದ ಬತ್ತಿಗಳ ಸಾಲು, ಕಾಮಾಲೆ ರೋಗ ಬಂದಂತೆ ಕಾಣುವ ಹುಣಸೆ ರಸ ಬಳೆದ ಹಿತ್ತಾಳೆ ಪಾತ್ರೆಗಳು, ಅಡಿಗಟ್ಟಲೆ ಎಳೆದರೂ ಹರಿಯದ ಒಬ್ಬಟ್ಟಿನ ಹಿಟ್ಟು, ಹೂರಣದ ಆಸೆಗಾಗಿ ಕಾದಿರುವ ಪುಟ್ಟ ಬೆಕ್ಕು, ಮಂಟಪಕ್ಕೆ ತೋರಣ ಕಟ್ಟುವ ಭರಾಟೆ, ಉಜ್ಜುವ, ತೊಳೆಯುವ, ಒಗೆಯುವ ಸರ ಬರ ಸದ್ದುಗಳ ಏಕತಾನತೆಯ ನಡುವೆ ‘ಚಂದ್ರನ್ನ ನೋಡೀರೋ ಜೋಕೆ’ ಎಂದು ಆಗಾಗ ಗುಟುರು ಹಾಕುವ ಕೆಂಪುಡುಗೆಯ ಮಡಿ ಅಜ್ಜಿ, ಗಣಪತಿ ತರಲು ಗದ್ದೆ ಬದುವಿನಲ್ಲಿ ಹೋಗುವುದೋ ಇಲ್ಲಾ ಸರ್ಕಾರಿ ರಸ್ತೆಯಲ್ಲೇ ಹೋಗುವುದೋ ಎಂದು ಯೋಚಿಸುತ್ತಿರುವ ಅಪ್ಪ, ತಾವೂ ಬರುತ್ತೇವೆಂದು ಹಟ ಹಿಡಿದು ಹಿಂದೆ ಮುಂದೆ ಸುತ್ತುತ್ತಿರುವ ಮಕ್ಕಳು.

     ಗಣಪ, ದೇವರಾದರೂ ಅವನನ್ನೇ ಮಾರಿ ಪುಡಿಗಾಸು ಸಂಪಾದಿಸುವ ಕತ್ಲೆಗದ್ದೆಯ ಭಂಡಾರಿ ಮಾಮ, ಅವನೊಡನೆ ದೇವರಿಗಾಗಿ ಚೌಕಾಸಿಗಿಳಿಯುವ ಜನರು, ಕೊನೆಗೂ ಜಗ್ಗಾಡಿ ಎಳೆದಾಡಿ ಎರಡು ರೂಪಾಯಿ ಉಳಿಸಿದೆವು ಎಂದು ಗಣಪತಿಯೊಡನೆ ತಮ್ಮ ತಮ್ಮ ಮನೆಗಳೆಡೆಗೆ ಕಾಲು ಹಾಕುತ್ತಿದ್ದರೆ, ಇತ್ತ ಭಂಡಾರಿ ಮಾಮ ಜನ ಕೊಟ್ಟ ಮುದ್ದೆಯಾಗಿರುವ ನೋಟುಗಳನ್ನೂ ಚಿಲ್ಲರೆಗಳಾನ್ನೂ ಎಣಿಸಿ ಸಂತೃಪ್ತಿಯಿಂದ ಉಸಿರು ಬಿಡದಿದ್ದರೂ ನಿಟ್ಟುಸಿರನ್ನಾದರೂ ಹೊರಗೆಡಹುತ್ತಾನೆ, ಕೈಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಈ ವರ್ಷವೂ ಸುಳ್ಳಾಗುತ್ತದೆ.

    ಇತ್ತ ಗದ್ದೆ ಬದುವಿನಿಂದ ಹೊರಟ ಗಣಪನನ್ನು ಹೊತ್ತ ಹಿಂಡು, ಕೇಕೆ ಹಾಕುತ್ತಾ ಗಣಪತಿ ಬಪ್ಪ ಎಂದು ಕೂಗುತ್ತಾ, ಮನೆಯೆಡೆಗೆ ಸಾಗುತ್ತದೆ. ಗಣಪ, ಮಾನವ ಕಟ್ಟಿದ ಮಂಟಪದಲ್ಲಿ ವಿರಾಜಮಾನನಾಗುತ್ತಲೇ ನಮಗೆಲ್ಲ ಪೂಜೆ ಮಾಡುವ ಭಟ್ಟರ ಯೊಚನೆ ಶುರುವಾಗುತ್ತದೆ. ಈ ಊರಿಗೋ ಇರುವವರೊಬ್ಬರೇ ಭಟ್ಟರು, ಹಣ್ಣು ಹಣ್ಣು ಮುದುಕ ಬೇರೆ, ಎಲ್ಲರ ಮನೆಗಳಲ್ಲೂ ತನ್ನ ಬೊಚ್ಚ ಬಾಯಿಯಲ್ಲಿ ತೊದಲುತ್ತಾ ಗಣಪನಿಗೂ ಅರ್ಥವಾಗದಂತೆ ಮಂತ್ರ ಪಠಣ! ಮಾಡುವ ಈ ಭಟ್ಟರ ಬಗ್ಗೆ ನಮಗೆ ಎಲ್ಲಿಲ್ಲದ ಪ್ರೀತಿ. ಕಾರಣ, ಇವರು ಪೂಜೆ ಮಾಡಿದರೆ ಮಾತ್ರ ನಮ್ಮ ಉದರಕ್ಕೂ ಒಂದು ನೆಲೆ. ಒಮ್ಮೊಮ್ಮೆ ಭಟ್ಟರು ಬರಲು ತಡವಾದರೆ ನಾವೆ ನಮಗೆ ಬರುವ ಮಂತ್ರಗಳನ್ನ ಬಡಬಡಿಸಿ ಊಟಕ್ಕೆ ಕೋಳಿತೇಬಿಡುತ್ತೇವೆ. ಎಲ್ಲವೂ ಹೊಟ್ಟೇಗಾಗಿ ಎಲ್ಲವೂ ಗೇಣು ಬಟ್ಟೆಗಾಗಿ ಎಂಬುದು ಪಾಪ ಆ ಗಣನಾಥನಿಗೂ ಗೊತ್ತಿರಬೇಕು ಹಾಗಾಗಿ ಈವರೆಗೂ ಆತ ಬೇಸರಿಸಿಲ್ಲ.
 
     ಮದ್ಯಾಹ್ನ ಆಗಬೇಕಿದ್ದ ಭಟ್ಟರ ಆಗಮನ ಸಂಜೆಗೊಂತೂ ಆಗುತ್ತದೆ. ಅಂತೂ ಇಂತೂ ಗಣಪನಿಗೆ ಭಟ್ಟರ ಮಂತ್ರ ಪಠಣದ ಕೇಳುವ ಭಾಗ್ಯ! ಸಿಗುತ್ತದೆ. ಹತ್ತಾರು ಆರತಿಗಳು, ನೂರಾರು ಸ್ತೋತ್ರಗಳು, ಐದಾರು ತಿಂಡಿಗಳು, ಮಾರುಗಟ್ಟಲೆ ಹೂವಿನ ರಾಶಿಯ ನಡುವೆ ಗಣಪ ಚೇತರಿಸಿಕೊಳ್ಳುತ್ತಿರುವಾಗಲೇ, ಗಣಪತಿ ನೋಡಲು ಬರುವ ಊರಿನ ಮಕ್ಕಳ ಸಾಷ್ಟಾಂಗ ನಮಸ್ಕಾರಗಳು ದಿಕ್ಕೆಡಿಸುತ್ತವೆ.

  ಮಾರನೇಯ ದಿನವೂ ಇದೇ ಕಾರ್ಯಕ್ರಮಗಳು ಪುನರಾವರ್ತನೆಯಾಗುತ್ತವೆ, ಆದರೆ ಸಂಜೆ ಗಣೇಶನನ್ನು ವಿಸರ್ಜಿಸುವಾಗ ಏನೋ ಕಳೆದುಕೊಳ್ಳುತ್ತಿರುವಂತಹಾ ಭಾವ, ಮಕ್ಕಳಿಗೋ ನಾಳೆಯಿಂದ ಶಾಲೆಗೆ ಹೋಗಬೇಕಲ್ಲ ಎಂಬ ಸಂಕಟ, ಕೆಲಸ ಮಾಡಿ ಮಾಡಿ ಹೈರಾಣಾಗಿರುವ ಮನೆ ಹೆಂಗಸರಿಗೆ ಸಧ್ಯ ಗಣಪನನ್ನು ನೀರಿಗೆ ಹಾಕಿದರೆ ಸಾಕಪ್ಪ! ಎಂಬ ನಿಟ್ಟುಸಿರು, ಮತ್ತೆ ಮುಂದಿನ ವರ್ಷ ಬರುತ್ತೇನೆ ಎಂದು ಹೇಳುತ್ತಾ ನೀರಿನಲ್ಲಿ ಕಣ್ಮರೆಯಾಗುವನು ಗಣಪ.... ಮತ್ತೆ ಬರುವೆಯಲ್ಲವೇ ಮುಂದಿನ ವರ್ಷ?

ಶಮಂತ್ ಪಾಟೀಲ್.ಜೆ.